ನಟ ಉಪೇಂದ್ರ ಅವರು ‘ನೆಲ್ಸನ್‌’ ಸಿನಿಮಾದ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಅರುಣ್‌ ಕುಮಾರ್‌ ನಿರ್ದೇಶನದ ಈ ಸಿನಿಮಾದ ಹೀರೋ ವಿನೋದ್‌ ಪ್ರಭಾಕರ್‌. ಚಾಮರಾಜನಗರ ಭಾಗದ ನೈಜ ಘಟನೆ ಆಧರಿಸಿದ ಚಿತ್ರವಿದು.

ವಿನೋದ್‌ ಪ್ರಭಾಕರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ನೆಲ್ಸನ್‌’ ಚಿತ್ರದ ಟೀಸರ್‌ ಅನ್ನು ಉಪೇಂದ್ರ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಆಕ್ಷನ್ – ಥ್ರಿಲ್ಲರ್‌ ಸಿನಿಮಾವನ್ನು ‘ಗೊಂಬೆಗಳ ಲವ್‌’ ಚಿತ್ರದ ನಾಯಕ ಅರುಣ್‌ ಕುಮಾರ್‌ ನಿರ್ದೇಶಿಸಿದ್ದಾರೆ. ಚಿತ್ರದ ಕುರಿತು ಮಾತನಾಡಿದ ಉಪೇಂದ್ರ, ‘ಟೈಗರ್ ಹವಾ ಆಗಲೂ ಇತ್ತು ಈಗಲೂ ಇರುತ್ತೆ. ಮುಂದೆಯೂ ಇರುತ್ತದೆ. ನಿಮ್ಮ ತಂದೆ ಸಿನಿಮಾಗೆ ಡೈಲಾಗ್ ಬರೆದಿದ್ದೆ. ಇಂದು ನಿಮ್ಮ ಟೀಸರ್ ಲಾಂಚ್ ಮಾಡಲು ನಿಮ್ಮ ತಂದೆ ಆಶೀರ್ವಾದ ಮಾಡಿದ್ದಾರೆ. ಟೀಸರ್ ಬಗ್ಗೆ ಏನು ಹೇಳೋದು? ಎಲ್ಲವೂ ಎಕ್ಸ್‌ಟ್ರಾರ್ಡಿನರಿಯಾಗಿದೆ. ಮೇಕಿಂಗ್, ಗೆಟಪ್ ಸೂಪರ್. ಸಬ್ಜೆಕ್ಟ್ ಬೇರೆ ತರ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಲಿದೆ’ ಎಂದು ಶುಭ ಹಾರೈಸಿದರು.

ನಟ ವಿನೋದ್ ಪ್ರಭಾಕರ್ ಮಾತನಾಡಿ, ‘ಉಪೇಂದ್ರ ಅಣ್ಣ ಟೀಸರ್ ನೋಡಿ ತುಂಬಾ ಖುಷಿಪಟ್ಟರು. ದರ್ಶನ್ ಸರ್ ಕೂಡ ಟೀಸರ್ ನೋಡಿದರು. ಈ ತರಹದ ಒಂದು ಸಿನಿಮಾ ಮಾಡಲು ಧೈರ್ಯ ಬೇಕು. ಶ್ರೀರಾಮ್ ಸರ್‌ಗೆ ಧನ್ಯವಾದ’ ಎಂದರು. ‘ಲಾಕ್‌ಡೌನ್‌ ಆದ್ಮೇಲೆ ಹಸಿವು, ಅಸಹಾಯಕ ಸಮಯದಲ್ಲಿ ನೆಲ್ಸನ್ ಸಿನಿಮಾ ಹುಟ್ಟಿಕೊಂಡಿದ್ದು. ಬರೆಯುತ್ತಾ ತುಂಬಾ ಚೆನ್ನಾಗಿ ಕತೆ ಬೆಳೆಯಿತು. ಸ್ನೇಹಿತರ ಮೂಲಕ ನಿರ್ಮಾಪಕರು ಸಿಕ್ಕಿದರು. ವಿನೋದ್ ಸರ್ ಸಪೋರ್ಟ್ ತುಂಬಾ ದೊಡ್ಡದಿದೆ’ ಎನ್ನುವುದು ಅರುಣ್‌ ಕುಮಾರ್‌ ಮಾತು. ‘ನೆಲ್ಸನ್ – ರಕ್ತದಲ್ಲಿ ನೆಂದ ದೇವರಕಾಡು’ ನೈಜ ಘಟನೆಯ ಕಥಾಹಂದರದ ಸಿನಿಮಾ. ಚಾಮರಾಜನಗರ ಜಿಲ್ಲೆಯಲ್ಲಿ 60ರಿಂದ 90ರ ದಶಕದಲ್ಲಿ ನಡೆಯುವ ಗ್ಯಾಗ್‌ಸ್ಟರ್‌ ಕಥೆ. ಅಲ್ಲಿನ ಭಾಷೆ, ಸಂಸ್ಕೃತಿ, ನೆಲ, ಜಲ, ಬುಡಕಟ್ಟು ಜನಾಂಗದ ಸಂಘರ್ಷ ಸೇರಿದಂತೆ ಒಂದಷ್ಟು ಅಂಶಗಳನ್ನು ಈ ಚಿತ್ರದಲ್ಲಿ ಅರುಣ್ ಕಟ್ಟಿಕೊಡಲಿದ್ದಾರೆ. Deepa Films ಬ್ಯಾನರ್ ಅಡಿಯಲ್ಲಿ ಬಿ ಎಮ್ ಶ್ರೀರಾಮ್ (ಕೋಲಾರ) ನಿರ್ಮಿಸಿರುವ ಚಿತ್ರಕ್ಕೆ ಪ್ರಜ್ವಲ್ ಗೌಡ ಛಾಯಾಗ್ರಹಣ, ಭರತ್ ಬಿ ಜಿ ಸಂಗೀತ, ವಿಜಯ್ ರಾಜ್ ಸಂಕಲನ, ಹರಿ ಸಂಭಾಷಣೆಯಿದೆ. ನವೆಂಬರ್ ತಿಂಗಳಿನಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

LEAVE A REPLY

Connect with

Please enter your comment!
Please enter your name here