ನಿರ್ದೇಶಕ ಯೋಗರಾಜ್‌ ಭಟ್ಟರ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಚಿತ್ರದ ಹೆಸರು ‘ಗರಡಿʼ. ಚಿತ್ರದಲ್ಲಿ ಯುವ ನಟ ಯಶಸ್‌ ಸೂರ್ಯ ನಾಯಕರಾಗಿದ್ದು, ನಾಯಕಿಯ ಹುಡುಕಾಟ ನಡೆದಿದೆ. ಸೌಮ್ಯ ಫಿಲಂಸ್‌ ಬ್ಯಾನರಿನಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ಯೋಗರಾಜ್‌ ಭಟ್ಟರ ಬತ್ತಳಿಕೆಯಿಂದ ಮತ್ತೊಂದು ಸಿನಿಮಾ ತಯಾರಾಗುತ್ತಿದೆ. ‘ಗಾಳಿಪಟ-2’ ಚಿತ್ರದ ನಂತರ ನಿರ್ದೇಶಕ ಯೋಗರಾಜ್‌ ಭಟ್‌ ‘ಗರಡಿʼ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಸಚಿವರಾದ ಬಿ.ಸಿ ಪಾಟೀಲ್‌ರ ಪತ್ನಿ ವನಜಾ ಪಾಟೀಲ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಹಳ ದಿನಗಳ ನಂತರ ಕೌರವ ಬಿ.ಸಿ ಪಾಟೀಲ್‌ ‘ಗರಡಿʼ ಚಿತ್ರದಲ್ಲಿ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ನಟ ದರ್ಶನ್‌ ಮುಹೂರ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಭಟ್ಟರ ‘ಗರಡಿʼ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ಜಯಂತ್‌ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಛಾಯಾಗ್ರಾಹಕರಾಗಿ ನಿರಂಜನ್ ಬಾಬು ಚಿತ್ರತಂಡದೊಂದಿಗೆ ಇದ್ದಾರೆ. ‘ಡ್ರಾಮಾʼ ಚಿತ್ರಕ್ಕೆ ಚಿತ್ರಕಥೆ ಬರೆದ ವಿಕಾಸ್‌ ಇಲ್ಲಿಯೂ ಭಟ್ಟರೊಟ್ಟಿಗೆ ಸೇರಿ ಚಿತ್ರಕಥೆ ಹೆಣೆದಿದ್ದಾರೆ. ‘ಗರಡಿʼ ಚಿತ್ರದಲ್ಲಿ ಹೆಸರಾಂತ ಕನ್ನಡ ನಟರೊಬ್ಬರು ಅತಿಥಿ ಪಾತ್ರದಲ್ಲಿ ಬಂದು ಹೋಗಲಿದ್ದಾರೆ ಎನ್ನುವ ಮಾಹಿತಿ ಕೊಟ್ಟಿದೆ ಚಿತ್ರತಂಡ. ಇತ್ತೀಚಿಗಷ್ಟೇ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಚಿತ್ರದ ಮುಹೂರ್ತ ಹಾಗೂ ಟೈಟಲ್‌ ಲಾಂಚ್‌ ಕಾಯಕ್ರಮ ನಡೆದಿದ್ದು, ಇನ್ನುಳಿದ ಪಾತ್ರಗಳಿಗಾಗಿ ಕಲಾವಿದರ ಹುಡುಕಾಟದಲ್ಲಿದೆ ಚಿತ್ರತಂಡ.

LEAVE A REPLY

Connect with

Please enter your comment!
Please enter your name here