ಆನಂದರಾಜ್‌ ನಿರ್ದೇಶನದಲ್ಲಿ ಅನಿರುದ್ಧ ನಟನೆಯ ‘Chef ಚಿದಂಬರ’ ಸಿನಿಮಾ ಸೆಟ್ಟೇರಿದೆ. ನಿಧಿ ಸುಬ್ಬಯ್ಯ ಹಾಗೂ ರೆಚೆಲ್ ಡೇವಿಡ್ ಚಿತ್ರದ ಇಬ್ಬರು ನಾಯಕಿಯರು.

‘ಇದೊಂದು ಡಾರ್ಕ್ ಕಾಮಿಡಿ ಜಾನರ್ ಸಿನಿಮಾ. ಕಾಮಿಡಿಯೊಂದಿಗೆ ಕೌತುಕವೂ ಇದೆ. ಒಂದು ಕೊಲೆಯ ಸುತ್ತ ಕತೆ ನಡೆಯುತ್ತದೆ. ನಾನು ಶಫ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ’ ಎಂದರು ನಟ ಅನಿರುದ್ಧ. ಅವರ ನೂತನ ಸಿನಿಮಾ ‘Chef ಚಿದಂಬರ’ ಸೆಟ್ಟೇರಿದೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಮತ್ತು ನಟ – ನಿರ್ದೇಶಕ ಉಪೇಂದ್ರ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಇತ್ತೀಚೆಗೆ ಮೈಸೂರಿನಲ್ಲಿ ವಿಷ್ಣುವರ್ಧನ್ ಸಮಾಧಿ ಬಳಿ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಲಾಗಿತ್ತು. ನಟ ಸುದೀಪ್‌ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದರು. ನಟ ಅನಿರುದ್ಧ ಐದು ವರ್ಷಗಳ ನಂತರ ಈ ಚಿತ್ರದೊಂದಿಗೆ ಸಿಲ್ವರ್‌ ಸ್ಕ್ರೀನ್‌ಗೆ ಮರಳುತ್ತಿದಾರೆ.

ಮುಹೂರ್ತದಲ್ಲಿ ಪಾಲ್ಗೊಂಡಿದ್ದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಅವರು, ‘ಈ ಸ್ಥಳಕ್ಕೆ ಬಂದಾಗ ನಮ್ಮ ಯಜಮಾನರ ‘ಯಜಮಾನ’ ಚಿತ್ರದ ಮುಹೂರ್ತ ಸಮಾರಂಭ ನೆನಪಾಯಿತು. ಆ ಚಿತ್ರದ ಮುಹೂರ್ತ ಕೂಡ ಇಲ್ಲೇ ನಡೆದಿತ್ತು. ಈ ಚಿತ್ರಕ್ಕೂ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು. ವಿಜಯ ರಾಘವೇಂದ್ರ ಅವರಿಗೆ ‘ರಾಘು’ ಸಿನಿಮಾ ನಿರ್ದೇಶಿಸಿದ್ದ ಎಂ ಆನಂದರಾಜ್‌ ಅವರು ನಿರ್ದೇಶಿಸುತ್ತಿರುವ ಚಿತ್ರವಿದು. ಚಿತ್ರದ ಇಬ್ಬರು ನಾಯಕಿಯರಾಗಿ ನಿಧಿ ಸುಬ್ಬಯ್ಯ ಮತ್ತು ರೆಚೆಲ್ ಡೇವಿಡ್ ನಟಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ ಎಸ್ ಶ್ರೀಧರ್, ರಘು ರಮಣಕೊಪ್ಪ, ಶಿವಮಣಿ ಚಿತ್ರದ ಇತರೆ ಪ್ರಮುಖ ಕಲಾವಿದರು. ರೂಪ ಡಿ ಎನ್ ನಿರ್ಮಿಸುತ್ತಿರುವ ಚಿತ್ರಕ್ಕೆ ಉದಯ್ ಲೀಲ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ನಿರ್ದೇಶನ, ಬಿ ಆರ್ ನವೀನ್ ಕುಮಾರ್ ಸೌಂಡ್ ಡಿಸೈನ್, ವಿಜೇತ್ ಚಂದ್ರ ಸಂಕಲನವಿದೆ.

LEAVE A REPLY

Connect with

Please enter your comment!
Please enter your name here