ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ಹೀರೋ ಗಣೇಶ್‌ ಜೋಡಿಯ ‘ಬಾನ ದಾರಿಯಲ್ಲಿ’ ಚಿತ್ರದ ‘ನಿನ್ನನು ನೋಡಿದ ನಂತರ’ ಹಾಡು ಬಿಡುಗಡೆಯಾಗಿದೆ. ಕವಿರಾಜ್‌ ರಚನೆ, ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯ ಈ ಗೀತೆಗೆ ಸೋನು ನಿಗಮ್‌ ದನಿಯಾಗಿದ್ದಾರೆ.

ನಟ ಗಣೇಶ್‌ ಸಿನಿಮಾಗಳಲ್ಲಿ ಗೀತಸಾಹಿತ್ಯ ಮತ್ತು ಸಂಗೀತಕ್ಕೆ ವಿಶೇಷ ಮನ್ನಣೆ ಇರುತ್ತದೆ. ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಅವರು ನಟಿಸುತ್ತಿರುವ ‘ಬಾನ ದಾರಿಯಲ್ಲಿ’ ಚಿತ್ರದಲ್ಲೂ ಇದರ ಸೂಚನೆ ಸಿಗುತ್ತದೆ. ಮೊದಲ ಕಂತಿನಲ್ಲಿ ಚಿತ್ರದ ‘ನಿನ್ನನು ನೋಡಿದ ನಂತರ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಕವಿರಾಜ್‌ ರಚನೆಯ ಈ ಸುಂದರ ಸಾಲುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಗಣೇಶ್‌ರಿಗೆ ಹಲವು ಸಿನಿಮಾಗಳಿಗೆ ಹಾಡಿರುವ ಸೋನು ನಿಗಮ್‌ ಈ ಹಾಡಿಗೆ ದನಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಗಣೇಶ್‌, “ಆನಂದ್‌ ಆಡಿಯೋದವರು ಹೆಚ್ಚಿನ ಮೊತ್ತ ಕೊಟ್ಟು ಚಿತ್ರದ ಆಡಿಯೋ ರೈಟ್ಸ್‌ ಪಡೆದುಕೊಂಡಿದ್ದಾರೆ. ನನಗೆ ಅನೇಕ ಹಿಟ್‌ ಹಾಡುಗಳನ್ನು ರಚಿಸಿರುವ ಕವಿರಾಜ್‌ ರಚನೆಯ ಗೀತೆಯಿದು. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ನನಗೆ ಕತೆಯ ಬಗ್ಗೆ ತುಂಬಾ ಭರವಸೆಯಿದೆ. ಸಾಮಾನ್ಯವಾಗಿ ನಾನು ಡಬ್ಬಿಂಗ್ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿ ಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ” ಎಂದರು.

ಮುಂಬೈನ ಯಶ್‌ ರಾಜ್‌ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್‌ ಆಗಿದೆ. ರುಕ್ಮಿಣಿ ವಸಂತ್‌ ಮತ್ತು ರೀಷ್ಮಾ ನಾಣಯ್ಯ ಚಿತ್ರದ ಇಬ್ಬರು ನಾಯಕಿಯರು. ಗಣೇಶ್‌ ಮತ್ತು ರುಕ್ಮಿಣಿ ವಸಂತ್‌ ಜೋಡಿಯ ಮೇಲೆ ಹಾಡು ಪಿಕ್ಚರೈಸ್‌ ಆಗಿದ್ದು, ಈ ಹಾಡಿಗಾಗಿ ರುಕ್ಮಿಣಿ ವಸಂತ್‌ ಅವರು ಸರ್ಫಿಂಗ್‌ ಕಲಿತಿದ್ದಾಗಿ ಹೇಳಿಕೊಂಡರು. ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ಪ್ರೀತಾ ಜಯರಾಂ ಜೊತೆಗೂಡಿ ಹೆಣೆದಿರುವ ಕತೆಯಿದು. ಶ್ರೀವಾರಿ ಟಾಕೀಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗರುವ ಚಿತ್ರಕ್ಕೆ ಅಭಿಲಾಷ್‌ ಕಲ್ಲತ್ತಿ ಛಾಯಾಗ್ರಹಣ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here