ಬಿಗ್‌ಬಾಸ್‌ ಸೀಸನ್‌ 10 ಜರ್ನೀಯನ್ನು ಹೊರಳಿ ನೋಡಿದರೆ ಕುತೂಹಲಕಾರಿ ಚಿತ್ರಣ ಸಿಗುತ್ತದೆ. ಈ ಬಾರಿ ಮನೆಯೊಳಗಿನ ಸದಸ್ಯರು ಎಷ್ಟು ವೈವಿಧ್ಯಪೂರ್ಣವಾಗಿದ್ದರೋ ಮನೆಗೆ ಭೇಟಿ ನೀಡಿದ ಅತಿಥಿಗಳೂ ಶೋಗೆ ಅಷ್ಟೇ ಗಾಢವಾದ ಬಣ್ಣವನ್ನು ತುಂಬಿದ್ದಾರೆ. ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟು ಕಲರ್‍‌ಫುಲ್‌ ಮಾಡಿದ ಗೆಸ್ಟ್‌ಗಳು ಯಾರು? ಅವರು ಭೇಟಿ ನೀಡಿದ ಸಂದರ್ಭ ಹೇಗಿತ್ತು? ಇಲ್ಲಿದೆ ಒಂದು ಚಿತ್ರಣ.

ಬಿಗ್‌ಬಾಸ್ ಕನ್ನಡ ಹತ್ತನೇ ಸೀಸನ್‌ ಅಂತಿಮ ಹಂತಕ್ಕೆ ಕ್ಷಣಗಣನೆ ಶುರುವಾಗಿದೆ. ಹದಿನಾಲ್ಕು ವಾರಗಳನ್ನು ಮುಗಿಸಿ ಹದಿನೈದನೇ ವಾರಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ಕುತೂಹಲದ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಂತದಲ್ಲಿ ಈ ಸೀಸನ್‌ ಬಿಗ್‌ಬಾಸ್ ಜರ್ನಿಯನ್ನು ಹೊರಳಿ ನೋಡಿದರೂ ಕುತೂಹಲಕಾರಿ ಚಿತ್ರಣ ಸಿಗುತ್ತದೆ. ಈ ಬಾರಿ ಮನೆಯೊಳಗಿನ ಸದಸ್ಯರು ಎಷ್ಟು ವೈವಿಧ್ಯಪೂರ್ಣವಾಗಿದ್ದರೋ ಮನೆಗೆ ಭೇಟಿ ನೀಡಿದ ಅತಿಥಿಗಳೂ ಶೋಗೆ ಅಷ್ಟೇ ಗಾಢವಾದ ಬಣ್ಣವನ್ನು ತುಂಬಿದ್ದಾರೆ. ಹಾಗಾದ್ರೆ ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟು ಕಲರ್‍‌ಫುಲ್‌ ಮಾಡಿದ ಗೆಸ್ಟ್‌ಗಳು ಯಾರು? ಅವರು ಭೇಟಿ ನೀಡಿದ ಸಂದರ್ಭ ಹೇಗಿತ್ತು? ಇಲ್ಲಿದೆ ಒಂದು ಚಿತ್ರಣ.

ಎಂಎಲ್‌ಎ ಪ್ರದೀಪ್‌ ಈಶ್ವರ್‍‌ ಸ್ಫೂರ್ತಿ ಮಾತು

ಬಿಗ್‌ಬಾಸ್ ಶೋ ಮೊದಲ ಬೆಳಗಿನಲ್ಲಿಯೇ ಒಂದು ಸರ್ಫೈಸ್ ವಿಸಿಟ್ ಕಾದಿತ್ತು. ಅಂದು ಬೆಳಿಗ್ಗೆ ಚಿಕ್ಕಬಳ್ಳಾಪುರ ಎಂಎಲ್‌ಎ ಪ್ರದೀಪ್ ಈಶ್ವರ್‍‌ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಮನೆಯೊಳಗಿನ ಸದಸ್ಯರು ಅವರ ಸ್ಪೂರ್ತಿದಾಯಕ ಮಾತು ಕೇಳಿ ಕಣ್ಣಲ್ಲಿ ನೀರು, ಎದೆಯಲ್ಲಿ ವಿಶ್ವಾಸವನ್ನೂ ತುಂಬಿಕೊಂಡು ಆಟಕ್ಕೆ ಅಣಿಯಾಗಿದ್ದರು. ಆರಂಭದಲ್ಲಿ ಪ್ರದೀಪ್‌, ಬಿಗ್‌ಬಾಸ್ ಶೋಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎಂದು ಊಹಿಸಿದ್ದರಿಂದ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯೂ ನಡೆದಿತ್ತು. ಆದರೆ ಪ್ರದೀಪ್‌ ಈಶ್ವರ್ ಅವರು ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಗಳ ಬಾಯಿ ಸಿಹಿ ಮಾಡಿ, ಮಾತುಗಳಿಂದ ವಿಶ್ವಾಸ ತುಂಬಿ ಮನೆಯಿಂದ ಹೊರಗೆ ಬಂದಿದ್ದರು.

ಲಾರ್ಡ್‌ ಪ್ರಥಮ್ ಗ್ರ್ಯಾಂಡ್ ಎಂಟ್ರಿ!

ಬಿಗ್‌ಬಾಸ್‌ ಸೀಸನ್‌ 4 ವಿನ್ನರ್ ಪ್ರಥಮ್‌ ಅವರ ಎಂಟ್ರಿ ಎಂಟರ್‌ಟೇನಿಂಗ್‌ ಆಗಿತ್ತು. ತಮ್ಮನ್ನು ತಾವು ‘ಲಾರ್ಡ್‌ ಪ್ರಥಮ್‌’ ಎಂದು ಕರೆದುಕೊಂಡೇ ಒಳಗೆ ಬಂದ ಅವರು ಮನೆಯ ಸದಸ್ಯರಿಂದಲೆಲ್ಲ ಭಾರಿ ಸೇವೆ ಮಾಡಿಸಿಕೊಂಡಿದ್ದರು. ಸದಸ್ಯರಿಗೆಲ್ಲ ತಮ್ಮದೇ ಸ್ಟೈಲ್‌ನಲ್ಲಿಆರ್ಡರ್ ಮಾಡುತ್ತ, ಅವರಿಗೆ ಸಲಹೆ ಸೂಚನೆ ನೀಡುತ್ತ ದಿನವಿಡೀ ಕಾಲಕಳೆದಿದ್ದರು. ಇದು ಬಿಗ್‌ಬಾಸ್ ನೀಡಿದ ಟಾಸ್ಕ್‌ ಇರಬೇಕು ಎಂದು ತಮ್ಮಷ್ಟಕ್ಕೆ ತಾವೇ ಊಹಿಸಿಕೊಂಡ ಸದಸ್ಯರು ಪ್ರಥಮ್ ಮಾತನ್ನು ಚಾಚೂ ತಪ್ಪದೆ ಪಾಲಿಸಿದ್ದರು. ಸಂಗೀತಾ ಅವರಂತೂ ಪ್ರಥಮ್ ಅವರಿಗೆ ಕೈತುತ್ತು ತಿನ್ನಿಸಿದ್ದರು ಕೂಡ. ಆದರೆ ವೀಕೆಂಡ್‌ ಎಪಿಸೋಡಿನಲ್ಲೇ ತಿಳಿದಿದ್ದು, ಪ್ರಥಮ್ ಅವರನ್ನೆಲ್ಲ ಬಕ್ರಾ ಮಾಡಿದ್ದಾರೆ. ಅವರು ಹೇಳಿದ ಆಜ್ಞೆಗಳನ್ನು ಪಾಲಿಸಬೇಕು ಎಂದು ಮನೆಯ ಸದಸ್ಯರಿಗೆ ಯಾವ ಸೂಚನೆಯೂ ಬಿಗ್‌ಬಾಸ್ ಕಡೆಯಿಂದ ಬಂದಿರಲಿಲ್ಲ ಎಂಬುದು!

ದಸರೆಗೆ ‘ತಾರಾ’ ಮೆರುಗು!

ಬಿಗ್‌ಬಾಸ್‌ ಮನೆ ಜಿದ್ದಾಜಿದ್ದಿನ ಟಾಸ್ಕ್‌ಗಳು, ಅದರಲ್ಲಿನ ಜಗಳಗಳ ಟೆನ್ಷನ್‌ನಲ್ಲಿ ಮುಳುಗಿಹೋಗಿರುವಾಗ ‘ದಸರೆ’ ಸಂಭ್ರಮಕ್ಕೆ ಮೆರುಗು ನೀಡಲು ಮನೆಯೊಳಗೆ ಬಂದವರು ತಾರಾ ಅನೂರಾಧಾ. ಅವರ ಉಪಸ್ಥಿತಿಯಲ್ಲಿ ಮನೆಯ ಸದಸ್ಯರೆಲ್ಲ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಹಾಡು, ಕುಣಿದು, ಸಂಭ್ರಮಿಸಿದ್ದರು. ತಾರಾ ಪ್ರತಿ ಸದಸ್ಯರನ್ನೂ ಕರೆದು ಅವರ ಶಕ್ತಿ, ಮಿತಿಗಳ ಬಗ್ಗೆ ತಿಳಿಸಿ ಸ್ಪೂರ್ತಿ ತುಂಬಿದ್ದರು.

ಭಾಗ್ಯ ತಂದ ಸುಷ್ಮಾ

ಕಲರ್ಸ್‌ ಕನ್ನಡದ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಎನ್ ರಾವ್ ಅವರ ಎಂಟ್ರಿ ಮನೆಮಂದಿಗೆಲ್ಲ ಒಂದು ರೀತಿಯಲ್ಲಿ ಪ್ಲೆಸೆಂಟ್ ಸರ್ಪೈಸ್ ಆಗಿತ್ತು. ಆ ಸಂದರ್ಭದಲ್ಲಿ ವರ್ತೂರು ಸಂತೋಷ್ ಆಗಷ್ಟೇ ಹುಲಿಯುಗುರಿನ ಪ್ರಕರಣ ಎದುರಿಸಿ ಮತ್ತೆ ಮನೆಯೊಳಗೆ ಎಂಟ್ರಿ ಪಡೆದುಕೊಂಡಿದ್ದರು. ಮತ್ತು ಆ ತಳಮಳ ತಾಳಲಾರದೆ ಮನೆಯಿಂದ ಹೊರಗೆ ಹೋಗುವುದಾಗಿ ಹಟ ಹಿಡಿದು ಕೂತಿದ್ದರು. ಸುಷ್ಮಾ ಅವರ ಆಪ್ತ ಕಿವಿಮಾತುಗಳು ಅವರ ನಿರ್ಧಾರವನ್ನು ತಕ್ಷಣಕ್ಕೆ ಬದಲಿಸಲಿಲ್ಲವಾದರೂ, ಮತ್ತೆ ಆಡುವ ಉತ್ಸಾಹ ತುಂಬಿದ್ದಂತೂ ನಿಜ. ಅವರಷ್ಟೇ ಅಲ್ಲ, ತಮ್ಮ ಅತ್ಯಮೂಲ್ಯ ಸಲಹೆಗಳನ್ನು ಅವರು ಎಲ್ಲ ಸದಸ್ಯರಿಗೂ ನೀಡಿದರು.

ಬ್ರಹ್ಮಾಂಡ ಗುರೂಜಿ ನಗೆಬುಗ್ಗೆ

ತಮ್ಮ ವಿಶಿಷ್ಟ ಮ್ಯಾನರಿಸಂ, ಮಾತಾಡುವ ಶೈಲಿಯಿಂದ ಸಾಕಷ್ಟು ಜನಪ್ರಿಯವಾಗಿರುವ ಬ್ರಹ್ಮಾಂಡ ಗುರೂಜಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಾಗಲೇ ಎಂಟರ್‌ಟೇನ್‌ಮೆಂಟ್‌ ಪ್ಯಾಕೇಜ್ ಕಾದಿದೆ ಎಂಬುದು ನಿಕ್ಕಿಯಾಗಿತ್ತು. ಆ ನಿರೀಕ್ಷೆಯಂತೂ ಹುಸಿ ಹೋಗಲಿಲ್ಲ. ಎಲ್ಲ ಸದಸ್ಯರಿಗೂ ಅಷ್ಟೇ ಏಕೆ ಬಿಗ್‌ಬಾಸ್‌ಗೂ ತಮ್ಮದೇ ಸ್ಟೈಲ್‌ನಲ್ಲಿ ಗದರುತ್ತ, ಅವರು ಸದಸ್ಯರಿಗೆ ಕೊಟ್ಟ ಕಾಟ ಸಣ್ಣದಲ್ಲ. ಬಿಗ್‌ಬಾಸ್ ಅವರಿಗೆ ನೀಡಿದ್ದ ಟಾಸ್ಕ್‌ ಅನ್ನು ಸಖತ್ ಎಂಟರ್‌ಟೈನಿಂಗ್ ಆಗಿಯೇ ನಿರ್ವಹಿಸಿದರು. ಮನೆಯಿಂದ ಹೋಗುವಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.

ಶ್ರುತಿ ನ್ಯಾಯ ಪಂಚಾಯ್ತಿ

ಹಿರಿಯ ನಟಿ ಶ್ರುತಿ ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು ನ್ಯಾಯ ಪಂಚಾಯ್ತಿ ನಡೆಸುವುದಕ್ಕಾಗಿ. ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಶನಿವಾರದ ಪಂಚಾಯ್ತಿಯನ್ನು ನಡೆಸಿಕೊಡಲು ಶ್ರುತಿ ಬಂದಿದ್ದರು. ಮನೆಮಂದಿಗೆಲ್ಲ ಅಕ್ಕರೆಯ ಅಕ್ಕನಾಗಿ ಬುದ್ಧಿ ಹೇಳಿ, ತಿದ್ದಿ ತೀಡಿದ ಅವರು, ಮನೆಯೊಳಗಿನ ನ್ಯಾಯಪೀಠದಲ್ಲಿ ಕೂತು ಕೈಯಲ್ಲಿ ಸುತ್ತಿಗೆ ಹಿಡಿದು ಮನೆಯ ಸದಸ್ಯರ ನಡುವಿನ ಹಲವು ಆರೋಪ-ಪ್ರತ್ಯಾರೋಪಗಳನ್ನು ಆಲಿಸಿ ಪ್ರಕರಣಗಳನ್ನು ಬಗೆಹರಿಸಿದರು ಕೂಡ. ವಿಶೇಷವಾಗಿ ಅವರು ಮನೆಯ ಮಹಿಳಾ ಸ್ಪರ್ಧಿಗಳಲ್ಲಿ ತುಂಬಿದ ವಿಶ್ವಾಸವಂತೂ ನಂತರದ ದಿನಗಳಲ್ಲಿ ಎದ್ದು ಕಾಣುವಂಥ ಬದಲಾವಣೆಯನ್ನು ತಂದಿತ್ತು.

ಶೈನ್-ಶುಭಾ ಜೋಷ್!

ಶ್ರುತಿ ಬಂದು ಹೋದ ಮರುದಿನದ ಭಾನುವಾರ ಮತ್ತಿಬ್ಬರು ಕಾರಿನಲ್ಲಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಅವರು ಹಿಂದಿನ ಬಿಗ್‌ಬಾಸ್ ಸೀಸನ್‌ ಸ್ಪರ್ಧಿಗಳಾದ ಶೈನ್ ಶೆಟ್ಟಿ ಮತ್ತು ಶುಭಾ ಪೂಂಜಾ. ಇಬ್ಬರೂ ತಮ್ಮ ಜೋಷ್‌ ಅನ್ನು, ಚುರುಕುತನವನ್ನು ಮನೆಯ ಸದಸ್ಯರಿಗೆಲ್ಲ ಹಂಚಿದರು. ಅವರ ಜೊತೆ ಸೇರಿ ವಿಶಿಷ್ಟವಾದ ಟಾಸ್ಕ್‌ಗಳನ್ನು ಆಡಿಸಿದರು. ಭಾನುವಾರವನ್ನು ಸಖತ್ ಕಲರ್‌ಫುಲ್ ಆಗಿ ಮಾಡಿದರು.

ಸಪ್ತಮಿ ಗೌಡ ಸಾಮಾಜಿಕ ಜಾಗೃತಿ

ಬಿಗ್‌ಬಾಸ್ ಮನೆಯಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಭಾಗವಾಗಿ ನಟಿ ಸಪ್ತಮಿ ಗೌಡ ಬಂದಿದ್ದರು. ಕರ್ನಾಟದ ಸರ್ಕಾರ ವಿತರಿಸುತ್ತಿರುವ ಶಕ್ತಿ ಮೆನ್‌ಸ್ಟ್ರೂಯಲ್ ಕಪ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅವರು ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಅವರು ಮನೆಯ ಪುರುಷ ಮತ್ತು ಮಹಿಳಾ ಸದಸ್ಯರಿಗೆ ಈ ಬಗ್ಗೆ ಕೇಳಿದ ಪ್ರಶ್ನೆಗಳು ವಿಚಾರಪ್ರಚೋದಕವಾಗಿದ್ದವು ಮತ್ತು ಸಾಮಾಜಿಕ ಜಾಗೃತಿ ಮೂಡಿಸುವಂತಿದ್ದವು.

ಗುರೂಜಿ ಭವಿಷ್ಯವಾಣಿ

ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರ ಆಗಮನ ಇಡೀ ಮನೆಯೊಳಗೆ ದೈವೀಕ ಕಳೆ ತುಂಬಿದ್ದು ಸುಳ್ಳಲ್ಲ. ಮನೆಯೊಳಗೆ ಆಗಮಿಸಿ ಪೂಜೆ ನಡೆಸಿದ ಅವರು ಪ್ರತಿಯೊಬ್ಬ ಸದಸ್ಯರಿಗೂ ಭವಿಷ್ಯವನ್ನೂ ಹೇಳಿದರು. ಅವರ ಮಾತುಗಳು ಹಲವು ಸ್ಪರ್ಧಿಗಳಲ್ಲಿ ಸ್ಫೂರ್ತಿ ತುಂಬಿತ್ತು. ಹಾಗೆಯೇ ಪ್ರತಾಪ್‌ ಅವರ ಕಳವಳವನ್ನೂ ಹೆಚ್ಚಿಸಿತ್ತು. ಒಟ್ಟಾರೆ ಬಿಗ್‌ಬಾಸ್‌ ವೇದಿಕೆಗೊಂದು ದೈವೀಕ ಪ್ರಭಾವಳಿಯನ್ನು ಅವರು ತುಂಬಿದರು ಎಂದರೆ ತಪ್ಪಾಗಲಿಕ್ಕಿಲ್ಲ.

LEAVE A REPLY

Connect with

Please enter your comment!
Please enter your name here