ಕನ್ನಡ ಚಿತ್ರನಟ ನಾಗಭೂಷಣ್‌ ಕಾರು ದಂಪತಿಗೆ ಢಿಕ್ಕಿ ಹೊಡೆದ ಘಟನೆ ನಿನ್ನೆ (ಸೆಪ್ಟೆಂಬರ್‌ 30) ರಾತ್ರಿ ವರದಿಯಾಗಿದೆ. ಈ ದುರ್ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ನಟ ನಾಗಭೂಷಣ್‌ ಅವರ ಮೇಲೆ ದೂರು ದಾಖಲಾಗಿದೆ.

‘ಬಡವ ರಾಸ್ಕಲ್‌’, ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗಳ ಖ್ಯಾತಿಯ ನಟ ನಾಗಭೂಷಣ್‌ ಕಾರು ನಿನ್ನೆ ವಸಂತನಗರ ಮುಖ್ಯರಸ್ತೆ ಬಳಿ ಅಪಘಾತಕ್ಕೀಡಾಗಿದೆ. ಕಾರನ್ನು ಸ್ವತಃ ನಾಗಭೂಷಣ್‌ ಡ್ರೈವ್‌ ಮಾಡುತ್ತಿದ್ದರು. ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ದಂಪತಿ ಮೇಲೆ ಕಾರು ಹರಿದಿದೆ. ಪರಿಣಾಮವಾಗಿ ಪ್ರೇಮ (48 ವರ್ಷ) ಎನ್ನುವವರು ಮೃತಪಟ್ಟಿದ್ದಾರೆ. ಅವರ ಪತಿ ಕೃಷ್ಣ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷ್ಣ – ಪ್ರೇಮ ದಂಪತಿ ಪುತ್ರ ಈ ಬಗ್ಗೆ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ನಟ ನಾಗಭೂಷಣ್‌ ಅವರು ಕೂಡ ಪೊಲೀಸರಿಗೆ ಅಪಘಾತಕ್ಕೆ ಸಂಬಂಧಿಸಿದಂತೆ ಸ್ವಯಂ ಹೇಳಿಕೆ ನೀಡಿದ್ದಾರೆ.

ನಾಗಭೂಷಣ್‌ ಹೇಳಿಕೆ | ನಿನ್ನ ರಾತ್ರಿ ಸ್ನೇಹಿತರನ್ನು ಭೇಟಿ ಮಾಡಲು R R ನಗರಕ್ಕೆ ಹೋಗಿರುವುದಾಗಿ, ಅಲ್ಲಿಂದ ಜೆಪಿ ನಗರದಲ್ಲಿರುವ ತಮ್ಮ ಮನೆಗೆ ವಾಪಸ್ಸಾಗುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ನಾಗಭೂಷಣ್ ತಿಳಿಸಿದ್ದಾರೆ. ತಾವೇ ಸ್ವತಃ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಅಪಾರ್ಟಮೆಂಟ್ ಹತ್ತಿರ ಒಬ್ಬ ಮಹಿಳೆ ಮತ್ತು ಪುರುಷ ಫುಟ್‌ಪಾತ್ ಮೇಲಿಂದ ರಸ್ತೆಗೆ ಕೆಳಗೆ ಇಳಿದು ರಸ್ತೆಗೆ ಬಂದರು. ಅವರು ಬಂದಿದ್ದನ್ನು ನೋಡಿ ತನಗೆ ಗಾಬರಿಯಾಗಿ ರಸ್ತೆಗೆ ಬಂದಿದ್ದವರಿಗೆ ಡಿಕ್ಕಿ ಮಾಡಿ, ನಂತರ ಫುಟ್ ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಮಾಡಿದೆನು ಎಂದು ಅವರು ಹೇಳಿಕೆ ನೀಡಿದ್ದಾರೆ.

ಈ ಘಟನೆಯಾದಾಗ ಮಹಿಳೆಗೆ ತಲೆಗೆ ಮತ್ತು ಮುಖಕ್ಕೆ ಏಟಾಗಿತ್ತು. ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಪುರುಷನ ಕಾಲುಗಳಿಗೆ, ಹೊಟ್ಟೆ ಹಾಗೂ ತಲೆಗೆ ಗಾಯವಾಗಿತ್ತು. ತಮ್ಮ ಕಾರು ಸ್ಟಾರ್ಟ್ ಆಗದೇ ಇರುವ ಕಾರಣ ಆಟೋದಲ್ಲಿ ಅವರನ್ನು ಸ್ವತಃ ತಾನೇ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆಸ್ಪತ್ರೆಯ ವೈದ್ಯರು ಮಾರ್ಗಮಧ್ಯದಲ್ಲೇ ಮಹಿಳೆಯು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಘಟನೆಯನ್ನು ತಿಳಿದು ಸಂಚಾರಿ ಪೊಲೀಸರು ಆಸ್ಪತ್ರೆಗೆ ಬಂದರು. ನಾನು ಕೂಡ ಅವರೊಂದಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದೆ ಎಂದು ನಾಗಭೂಷಣ್‌ ಹೇಳಿಕೆ ದಾಖಲಿಸಿದ್ದಾರೆ.

ಕೃಷ್ಣ – ಪ್ರೇಮ ದಂಪತಿ ಪುತ್ರ, ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿ ಅಪಘಾತ ಮಾಡಿರುವ ಕಾರು ಚಾಲಕನನ್ನು ಬಂಧಿಸುವಂತೆ ದೂರು ದಾಖಲಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಮಹಿಳೆಯ ಸಾವಿಗೆ ಕಾರಣರಾದ ನಟ ನಾಗಭೂಷಣ್‌ ಅವರನ್ನು ಕುಮಾರಸ್ವಾಮಿ ಲೇಔಟ್‌ ಪೊಲೀಸರು ಬಂಧಿಸಿ, ನಂತರ ಸ್ಪೇಷನ್‌ ಬೇಲ್‌ ಮೇಲೆ ಬಿಡುಗಡೆ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ಜಾರಿ ಮಾಡಿದ್ದಾರೆ. ಅಕ್ಟೋಬರ್‌ 3ರಂದು ಹಾಜರಾಗುವಂತೆ ನೋಟೀಸ್‌ನಲ್ಲಿ ತಿಳಿಸಲಾಗಿದೆ.

ಟಗರು ಪಲ್ಯ | ಇಂಜಿನಿಯರಿಂಗ್‌ ಪದವೀಧರ ನಟ ನಾಗಭೂಷಣ್‌ ಉದಯೋನ್ಮುಖ ಕನ್ನಡ ಚಿತ್ರನಟ. ನಟ ಧನಂಜಯ ಅವರ ಆಪ್ತ ಸ್ನೇಹಿತರಾದ ನಾಗಭೂಷಣ್‌ ವೃತ್ತಿಬದುಕಿಗೆ ‘ಬಡವ ರಾಸ್ಕಲ್‌’ ಸಿನಿಮಾ ಒಂದೊಳ್ಳೆಯ ತಿರುವು ನೀಡಿತು. ಇತ್ತೀಚೆಗಷ್ಟೇ ತೆರೆಕಂಡ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲೂ ಅವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಾಗಭೂಷಣ್‌ ಹೀರೋ ಆಗಿ ನಟಿಸುತ್ತಿರುವ ‘ಟಗರು ಪಲ್ಯ’ ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಪ್ರೊಮೋಷನ್‌ ಚಟುವಟಿಕೆಗಳು ಆರಂಭವಾಗಿದ್ದವು. ನಟ ಧನಂಜಯ ನಿರ್ಮಾಣದ ಈ ಸಿನಿಮಾದ ನಾಯಕನಟಿ ಅಮೃತಾ ಪ್ರೇಮ್‌. ‘ಹನಿಮೂನ್‌’ ವೆಬ್‌ ಸರಣಿಯಲ್ಲೂ ಅವರು ಅಭಿನಯಿಸಿದ್ದರು.

LEAVE A REPLY

Connect with

Please enter your comment!
Please enter your name here