ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ತೆಲುಗು ಸಿನಿಮಾದ ವಿಶೇಷ ಪಾತ್ರಗಳಲ್ಲಿ ಮೋಹನ್‌ಲಾಲ್‌, ಪ್ರಭಾಸ್‌ ನಟಿಸುತ್ತಿದ್ದಾರೆ. ಇದೀಗ ಚಿತ್ರತಂಡಕ್ಕೆ ಶಿವರಾಜಕುಮಾರ್‌ ಅವರ ಸೇರ್ಪಡೆಯಾಗಿದೆ. ತಮ್ಮ ಪುತ್ರ ವಿಷ್ಣು ಮಂಚುಗಾಗಿ ಹಿರಿಯ ನಟ ಮೋಹನ್‌ ಬಾಬು ನಿರ್ಮಿಸುತ್ತಿರುವ ಈ ಚಿತ್ರವನ್ನು ಮುಕೇಶ್‌ ಕುಮಾರ್‌ ಸಿಂಗ್‌ ನಿರ್ದೇಶಿಸುತ್ತಿದ್ದಾರೆ.

ತೆಲುಗು ಹಿರಿಯ ನಟ ಮೋಹನ್‌ ಬಾಬು ನಿರ್ಮಾಣದ ‘ಕಣ್ಣಪ್ಪ’ ಪೌರಾಣಿಕ ತೆಲುಗು ಸಿನಿಮಾ ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಮೋಹನ್‌ ಬಾಬು ಪುತ್ರ ವಿಷ್ಣು ಮಂಚು ಅಭಿನಯದ ಚಿತ್ರಕ್ಕೆ ‘ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಎನ್ನುವ ಟ್ಯಾಗ್‌ ಲೈನ್‌ ಇದೆ. ಶಿವಭಕ್ತ ಕಣ್ಣಪ್ಪನ ಕತೆ. ಈ ಸಿನಿಮಾದ ವಿಶೇಷ ಪಾತ್ರಗಳಲ್ಲಿ ನಟರಾದ ಮೋಹನ್‌ಲಾಲ್‌ ಮತ್ತು ಪ್ರಭಾಸ್‌ ನಟಿಸುತ್ತಿರುವುದು ಸರಿಯಷ್ಟೆ. ಇದೀಗ ಚಿತ್ರತಂಡಕ್ಕೆ ಕನ್ನಡ ನಟ ಶಿವರಾಜಕುಮಾರ್‌ ಸೇರ್ಪಡೆಗೊಂಡಿದ್ದಾರೆ. ಶಿವರಾಜ್‍ಕುಮಾರ್ ಅವರಿಗೂ, ಕಣ್ಣಪ್ಪನಿಗೂ ಹಳೆಯ ನಂಟು ಇದೆ. ನಟನಾ ಬದುಕಿನ ಆರಂಭದ ದಿನಗಳಲ್ಲಿ ಶಿವರಾಜಕುಮಾರ್‌ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ಕಣ್ಣಪ್ಪನಾಗಿ ಕಾಣಿಸಿಕೊಂಡಿದ್ದರು. ಈಗ ಅದೇ ಪಾತ್ರವನ್ನು ತೆಲುಗಿನಲ್ಲಿ ವಿಷ್ಣು ಮಂಚು ಮಾಡುತ್ತಿದ್ದಾರೆ.

‘ಕಣ್ಣಪ್ಪ’ ತೆಲುಗು ಸಿನಿಮಾ ದೊಡ್ಡ ಬಜೆಟ್‌ನಲ್ಲಿ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಶಿವರಾಜ್‍ಕುಮಾರ್ ಅವರ ಪಾತ್ರವೇನು? ಎಂಬ ವಿಷಯವನ್ನು ಚಿತ್ರತಂಡ ಸದ್ಯಕ್ಕೆ ರಹಸ್ಯವಾಗಿಟ್ಟಿದೆ. ಆದರೆ, ಶಿವಣ್ಣ ಪಾತ್ರ ಚಿತ್ರದ ಹೈಲೈಟ್‍ ಆಗಲಿದ್ದು, ಅವರ ಅಭಿಮಾನಿಗಳಿಗೆ ಬಹಳ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಈ ಹಿಂದೆ ಸ್ಟಾರ್ ಪ್ಲಸ್‍ ವಾಹಿನಿಗಾಗಿ ‘ಮಹಾಭಾರತ’ ಸರಣಿ ನಿರ್ದೇಶಿಸಿದ್ದ ಮುಕೇಶ್‍ ಕುಮಾರ್ ‍ಸಿಂಗ್‍, ಈ ಪೌರಾಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶಿವನ ಅಚಲ ಭಕ್ತನಾದ ಕಣ್ಣಪ್ಪನ ಕಾಲಾತೀತ ಕಥೆಯ ಚಿತ್ರೀಕರಣ ಈಗಾಗಲೇ ನ್ಯೂಜಿಲ್ಯಾಂಡ್‍ನಲ್ಲಿ ಪ್ರಾರಂಭವಾಗಿದೆ.

LEAVE A REPLY

Connect with

Please enter your comment!
Please enter your name here