ಸಿಂಗಾಪುರ ಕನ್ನಡ ಸಂಘ ಸಿಂಗಾಪುರದಲ್ಲಿ ಆಯೋಜಿಸಿದ್ದ ‘ವಚನಾಂಜಲಿ’ ಕಾರ್ಯಕ್ರಮದ ಭಾಗವಾಗಿ ‘ವಿರಾಟಪುರ ವಿರಾಗಿ’ ಚಲನಚಿತ್ರ ಪ್ರದರ್ಶನಗೊಂಡಿದೆ. ಅಲ್ಲಿನ ಸಾವಿರಾರು ಕನ್ನಡಿಗರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಬಿ ಎಸ್‌ ಲಿಂಗದೇವರು ಮತ್ತು ಶೀರ್ಷಿಕೆ ಪಾತ್ರ ನಿರ್ವಹಿಸಿರುವ ನಟ ಸುಚೇಂದ್ರ ಪ್ರಸಾದ್‌ ಅವರು ಹಾಜರಿದ್ದರು.

ಸುಮಾರು ನಾಲ್ಕಾರು ದಶಕಗಳಿಂದ ಕನ್ನಡಿಗರು ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಕನ್ನಡಿಗರು ಸಂಘ ಜೀವಿಗಳು ಮತ್ತು ತಮ್ಮ ಸಂಸ್ಕೃತಿ, ಪರಂಪರೆ ಮತ್ತು ಕನ್ನಡ ಭಾಷೆ ತಮ್ಮ ಅಸ್ಮಿತೆಯೆಂದು ನಂಬಿರುವವರು. ಈ ಹಿನ್ನೆಲೆಯಲ್ಲಿ 11ನೇ ಸೆಪ್ಟೆಂಬರ್ 1996ರಂದು ಸಿಂಗಾಪೂರದ ರಿಜಿಸ್ಟ್ರಾರ್ ಆಫ್ ಸೊಸೈಟಿಯಲ್ಲಿ ನೊಂದಾಯಿಸುವ ಮೂಲಕ ಕನ್ನಡ ಸಂಘ ಉದಯವಾಯಿತು. ಅಂದಿನಿಂದ ಇಂದಿನವರೆಗೂ ಕನ್ನಡಿಗರ ಸಂಸ್ಕೃತಿ, ಪರಂಪರೆ ಮತ್ತು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶ್ರಮಿಸುತ್ತಿದ್ದಾರೆ.

ಈ ಬಾರಿ ‘ವಚನಾಂಜಲಿ’ಯನ್ನು ವಿಶೇಷವಾಗಿ ಆಯೋಜಿಸುವಾಗ ಬಂದಂತಹ ಚರ್ಚೆಯಲ್ಲಿ, ಶಿವಯೋಗಿಗಳಾದ ಶ್ರೀ ಹಾನಗಲ್ ಕುಮಾರಸ್ವಾಮಿಯವರ ಜೀವನಾಧಾರಿತ ಚಲನಚಿತ್ರ ‘ವಿರಾಟಪುರ ವಿರಾಗಿ’ಯ ಪ್ರದರ್ಶನವನ್ನು ಏರ್ಪಡಿಸಿದರೆ ಹೇಗೆ? ಎಂಬ ಪ್ರಶ್ನೆಯೊಂದಿಗೆ ಆರಂಭಗೊಂಡ ಒಂದು ಆಲೋಚನೆ ಕೆಲವೇ ದಿನಗಳಲ್ಲಿ ಆಯೋಜನೆಯಾಗಿ ಬದಲಾಗಿ, ಜೊತೆಗೆ ಈ ಚಿತ್ರದ ನಿರ್ದೇಶಕ ಬಿ ಎಸ್ ಲಿಂಗದೇವರು ಹಾಗೂ ಅದರ ಮುಖ್ಯ ಪಾತ್ರಧಾರಿಯಾಗಿ ನಟಿಸಿದ ಕಲಾವಿದ ಕೆ ಸುಚೇಂದ್ರ ಪ್ರಸಾದ ಅವರ ಸಮ್ಮುಖದಲ್ಲಿ ನಡೆಸಿದರೆ ಇನ್ನೂ ಹೆಚ್ಚು ಅರ್ಥಪೂರ್ಣವಾಗಿರುತ್ತದೆಂದು ಕನ್ನಡ ಸಂಘದ (ಸಿಂಗಾಪುರ) ಆಶಯ ಕೊನೆಗೂ ಯಶಸ್ವಿ ಕಾರ್ಯಕ್ರಮವಾಗಿ ಹೊರಹೊಮ್ಮಿದ್ದು ನಿಜಕ್ಕೂ ಅಭಿನಂದನೀಯ.

ಕನ್ನಡ ಸಂಘವು (ಸಿಂಗಾಪುರ) ವಚನ ಸಾಹಿತ್ಯದ ಸಾರಾಮೃತವನ್ನು ಹರಡುವ, ಹಂಚುವ ಸದುದ್ದೇಶದಿಂದ ಸುಮಾರು 13 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮವೇ ‘ವಚನಾಂಜಲಿ’. ಪ್ರತೀ ವರ್ಷ ವಿವಿಧ ರೂಪಗಳಲ್ಲಿ ಆಚರಿಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮ ಶಾಸ್ತ್ರೀಯ ಸಂಗೀತ, ಜನಪದ ಶೈಲಿಯ ಹಾಡುಗಳ ಮೂಲಕ, ಭರತ ನಾಟ್ಯದಲ್ಲಿನ ನೃತ್ಯ ರೂಪಕಗಳಲ್ಲಿನ ಸಂಸ್ಕೃತಿ ಮತ್ತು ಸಾಹಿತ್ಯದ ಒಳ ಹರಿವನ್ನು ಅರಿಯುವ ಹಾದಿಯಲ್ಲಿ ವಿಚಾರ ಗೋಷ್ಠಿಗಳು, ವಿಚಾರ ಸಂಕಿರಣ, ಸಂವಾದಗಳ ಮೂಲಕ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ.

ಶ್ರೀಯುತರಾದಂತಹ ಅರವಿಂದ ಜತ್ತಿ, ವೈಜಯಂತಿ ಕಾಶಿ, ಲೀಲಾದೇವಿ ಪ್ರಸಾದ್, ಗೋ ರು ಚನ್ನಬಸಪ್ಪ, ಪುತ್ತೂರು ನರಸಿಂಹ ನಾಯಕ, ಡಾ ರೇಣುಕಾ ಗುಬ್ಬಿ, ವಿದ್ವಾನ್ ಕಲಾ ಸುಜಯ್ ಶಾನಭಾಗ್, ಡಾ ಬಸವ ಮರುಳ ಸಿದ್ದ ಸ್ವಾಮಿ, ಡಾ ವೀಣಾ ಬನ್ನಂಜೆಯಂತಹ ಗಣ್ಯವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆಂಬುದು ಕನ್ನಡ ಸಂಘವು (ಸಿಂಗಾಪುರ) ಹೆಮ್ಮೆ ಪಡುವಂತಹ ವಿಷಯ. ಜನಸಾಮಾನ್ಯರ ಬದುಕನ್ನು ಉನ್ನತಗೊಳಿಸಲು ಹನ್ನೆರಡನೆಯ ಶತಮಾನದ ಶಿವಶರಣರು ಶ್ರಮಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಶರಣರು ಸಾಹಿತ್ಯ ರಚನೆಗೋಸ್ಕರ ವಚನಗಳನ್ನು ಬರೆಯದೇ ದಿನನಿತ್ಯದ ತಮ್ಮ ಅನುಭವಗಳನ್ನು ವಚನದ ರೂಪದಲ್ಲಿ ಹೇಳುವುದರ ಮೂಲಕ ವಚನ ಸಾಹಿತ್ಯ ಒಂದು ಚಳವಳಿಯಾಯಿತು. ವರ್ಣ-ಆಧಾರಿತ, ಜಾತಿ-ಆಧಾರಿತ, ಲಿಂಗ-ಆಧಾರಿತ ಅಸಮಾನತೆಯನ್ನು ನಿರ್ಮೂಲಗೊಳಿಸಿ ಸರ್ವ ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು ಶಿವ ಶರಣರು. ಈ ಹಿನ್ನಲೆಯಲ್ಲಿ ಶ್ರೀ ಹಾನಗಲ್ ಕುಮಾರಸ್ವಾಮಿಯವರು ಎಲ್ಲರನ್ನು ಒಳಗೊಳ್ಳುವ ಮತ್ತು ಬಹುತ್ವ ಪರಂಪರೆಗೆ ಒತ್ತುಕೊಟ್ಟು ಸಮಸಮಾಜ ನಿರ್ಮಿಸಲು ಸ್ವಾತಂತ್ರ್ಯಪೂರ್ವದಲ್ಲಿ ಶ್ರಮಿಸಿದವರು.

ಅಂತಹವರ ಜೀವನಾಧಾರಿತ ‘ವಿರಾಟಪುರ ವಿರಾಗಿ’ ಸಿನಿಮಾವು ಶರಣರ ವಚನಗಳ ಅರ್ಥ ಮತ್ತು ಅಂತರಂಗದ ಅರಿವನ್ನು ನಮಗೆ ಮೂಡಿಸಿದೆ ಎಂದರೂ ತಪ್ಪಾಗಲಾರದು. ವಚನಗಳನ್ನು ಸನ್ನಿವೇಶಗಳಿಗೆ ಹೊಂದುವಂತೆ ಆಯ್ಕೆ ಮಾಡಿಕೊಂಡು, ಅದಕ್ಕೆ ಅತ್ಯತ್ತಮ ಸಂಗೀತ ಸಂಯೋಜನೆ ಮಾಡಿರುವುದು ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಸಹಾಯವಾಗಿದೆ. ಇಡೀ ತಂಡವು ನಮ್ಮನ್ನು ಸ್ವಾತಂತ್ರ್ಯಪೂರ್ವಕಾಲಗಟ್ಟಕ್ಕೆ ಕೊಂಡಯ್ಯುವಲ್ಲಿ ಯಶಸ್ವಿಯಾಗಿದ್ದು, ಜನಸಾಮಾನ್ಯರನ್ನು ಆಧ್ಯಾತ್ಮದತ್ತ ಕರೆದುಕೊಳ್ಳಲು, ನೈತಿಕ ಮೌಲ್ಯಗಳನ್ನು ಹೆಚ್ಚಿಸಲು, ಅನುಭವದ ಚಿಂತನೆಗೆ ತೊಡಗಿಸಿರುವ ಇದು ಕನ್ನಡಿಗರ ಹೆಮ್ಮೆಯ ಚಿತ್ರವಾಗಿದೆ. ತುಂಬಿದ ಸಭಾಂಗಣದಲ್ಲಿ ‘ವಿರಾಟಪುರ ವಿರಾಗಿ’ ಚಲನಚಿತ್ರ ಪ್ರದರ್ಶನ, ವಚನ ಸಾಹಿತ್ಯದ ಬಗೆಗಿನ ವಿಚಾರ ಗೋಷ್ಠಿ, ವಚನ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ ಕೊನೆಯಲ್ಲಿ ದಾಸೋಹದೊಂದಿಗೆ ಅನೇಕ ವಿಚಾರಗಳ ವಿವರಣೆ, ವಿಮರ್ಶೆ, ವಿತರಣೆಯಲ್ಲಿ ತನ್ನ ಸಾರ್ಥಕತೆಯನ್ನು ಕಂಡಿತೆಂದರೆ ತಪ್ಪಾಗಲಾರದು.

LEAVE A REPLY

Connect with

Please enter your comment!
Please enter your name here