‘ಶ್ಯಾಂ ಸಿಂಗಾ ರಾಯ್‌’ ತೆಲುಗು ಸಿನಿಮಾದ ಕನ್ನಡ ಡಬ್ಬಿಂಗ್‌ ಅವತರಣಿಕೆಗೆ ಚಿತ್ರಸಾಹಿತಿ ಕವಿರಾಜ್ ಐದು ಹಾಡುಗಳನ್ನು ಬರೆದಿದ್ದಾರೆ. ಅವರಿಲ್ಲಿ ಮೂಲ ತೆಲುಗು ಗೀತಸಾಹಿತ್ಯದ ಅನುವಾದ ಮಾಡಿಲ್ಲ. ಬದಲಿಗೆ ಚಿತ್ರದ ಸನ್ನಿವೇಶಗಳ ಕುರಿತು ನಿರ್ದೇಶಕರು, ಸಂಗೀತ ಸಂಯೋಜನಕರೊಂದಿಗೆ ಚರ್ಚಿಸಿ ಹೊಸದಾಗಿ ಸಾಲುಗಳನ್ನು ಬರೆದು ಚಿತ್ರದ ಅಂದ ಹೆಚ್ಚಿಸಿದ್ದಾರೆ.

“ನಮ್ಮಲ್ಲಿ ಡಬ್ಬಿಂಗ್ ಸಿನಿಮಾಗಳು ಹೆಚ್ಚು ವೃತ್ತಿಪರತೆಯಿಂದ ತಯಾರಾಗಬೇಕು. ಬರವಣಿಗೆಗೆ ಗೌರವಯುತ ಸಂಭಾವನೆ ಸಿಕ್ಕಾಗ ಅದು ಸಾಧ್ಯ. ಆಗ ತೆರೆ ಮೇಲೆ ಡಬ್ಬಿಂಗ್ ಚಿತ್ರಗಳು ಪರಿಣಾಮಕಾರಿಯಾಗಿ ಮೂಡುತ್ತವೆ” ಎನ್ನುತ್ತಾರೆ ಚಿತ್ರಸಾಹಿತಿ ಕವಿರಾಜ್‌. ಅವರು ರಾಹುಲ್ ಸಾಂಕೃತ್ಯನ್ ನಿರ್ದೇಶನದಲ್ಲಿ ಖ್ಯಾತ ನಾಯಕನಟ ನಾನಿ ನಟಿಸಿರುವ ‘ಶ್ಯಾಂ ಸಿಂಗಾ ರಾಯ್‌’ ತೆಲುಗು ಚಿತ್ರದ ಕನ್ನಡ ಡಬ್ಬಿಂಗ್ ಅವತರಣಿಕೆಗೆ ಐದು ಹಾಡುಗಳನ್ನು ಬರೆದಿದ್ದಾರೆ. ತಾವು ತೆಲುಗು ಗೀತಸಾಹಿತ್ಯವನ್ನು ಅನುವಾದ ಮಾಡದೆ ಚಿತ್ರದ ಸನ್ನಿವೇಶಗಳ ಬಗ್ಗೆ ಚರ್ಚಿಸಿ ಹೊಸದಾಗಿ ಗೀತೆ ರಚಿಸುವ ಷರತ್ತಿನೊಂದಿಗೇ ಅವರು ಈ ಕೆಲಸ ಒಪ್ಪಿಕೊಂಡಿದ್ದು. ಮಿಕ್ಕಿ ಜೆ ಮೇಯರ್ ಅವರ ಐದು ಟ್ಯೂನ್‌ಗಳಿಗೆ ಕವಿರಾಜ್‌ ಹಾಡು ಬರೆದಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಯ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಅನುರಾಗ್ ಕುಲಕರ್ಣಿ, ವಿಶಾಲ್ ದದ್ಲಾನಿ ಮತ್ತು ಲಿಜ್ಜಿ ಹಾಡಿದ್ದಾರೆ. ಕವಿರಾಜ್‌ ರಚನೆಯ ಈ ಗೀತೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

“ಸಾಮಾನ್ಯವಾಗಿ ಕನ್ನಡಕ್ಕೆ ಡಬ್ ಆಗುವ ಸಿನಿಮಾಗಳ ಹಾಡುಗಳು ಒರಿಜಿನಲ್ ಸಿನಿಮಾದ ಹಾಡುಗಳ ಗುಣಮಟ್ಟದಲ್ಲಿ ಇರುವುದಿಲ್ಲ ಎಂಬ ಸಹಜ ದೂರಿದೆ. ಅದಕ್ಕೆ ಮುಖ್ಯ ಕಾರಣ ಸಿನಿಮಾದ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರು ಮುಂತಾದ ಮೂಲ ತಂತ್ರಜ್ಞರು ಇತರೇ ಭಾಷೆಯ ಡಬ್ಬಿಂಗ್ ವಿಷಯಗಳಲ್ಲಿ ತೊಡಗಿಸಿಕೊಳ್ಳದಿರುವುದು. ಸಾಮಾನ್ಯವಾಗಿ ಡಬ್ಬಿಂಗ್ ಕಾರ್ಯಕ್ಕಾಗಿ ಇಡೀ ಸಿನಿಮಾವನ್ನು ಒಂದು ಸಾಧಾರಣ/ ಕಡಿಮೆ ಬಜೆಟ್ಟಿಗೆ ಮೂರನೇ ವ್ಯಕ್ತಿ ಅಥವಾ ಸಂಸ್ಥೆಗೆ ವಹಿಸಿಬಿಡುತ್ತಾರೆ. ಗಾಯಕರು ಹಾಡಿದ ಮೇಲೆ ಉತ್ತಮ ತಂತ್ರಜ್ಞರಿಂದ ಮಿಕ್ಸಿಂಗ್ ,ಮಾಸ್ಟರಿಂಗ್ ಆಗಿಲ್ಲಾ ಅಂದ್ರೆ ಅದು ಚೆನ್ನಾಗಿ ಸೌಂಡ್ ಆಗಲು ಸಾಧ್ಯವಿಲ್ಲ” ಎನ್ನುತ್ತಾರೆ ಕವಿರಾಜ್‌. ಸೀಮಿತ ಸಂಪನ್ಮೂಲಗಳ ಕಾರಣದಿಂದ ಜವಾಬ್ದಾರಿ ವಹಿಸಿಕೊಂಡವರಿಗೂ ಆ ಮಟ್ಟದ ಗುಣಮಟ್ಟ ನೀಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಹಲವರು ಕವಿರಾಜ್‌ ಅವರಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಿದೆ. ಇದೇ ಕಾರಣಕ್ಕೆ ಈ ಹಿಂದೆ ಡಬ್ಬಿಂಗ್ ಸಿನಿಮಾಗಳಿಗೆ ಹಾಡು ಬರೆಯಲು ಆಫರ್ ಬಂದರೂ ತಾವು ಒಪ್ಪಿರಲಿಲ್ಲ ಎನ್ನುತ್ತಾರವರು.

“ಸಂಭಾವನೆ ತೀರಾ ಕಡಿಮೆ ಮತ್ತು ಗೌರವಯುತವಾದುದ್ದಲ್ಲ ಎಂಬ ಕಾರಣಕ್ಕೆ ಹಿಂದೆ ಸಾಕಷ್ಟು ಆಫರ್‌ಗಳನ್ನು ನಿರಾಕರಿಸಿದ್ದೆ. ಆದರೆ ಇತ್ತೀಚೆಗೆ ಸಂಗೀತ ನಿರ್ದೇಶಕ ಮಿಕ್ಕಿ ಜೆ. ಮೇಯರ್ ನನ್ನನ್ನು ಸಂಪರ್ಕಿಸಿದ್ದರು‌. ತಾವು  ಸಂಗೀತ ನೀಡುತ್ತಿರುವ ತೆಲುಗು ಮೂಲದ ಚತುರ್ಭಾಷಾ ಚಿತ್ರ ‘ಶ್ಯಾಂ ಸಿಂಗಾ ರಾಯ್’ ಸಿನಿಮಾದ ಕನ್ನಡ ಹಾಡುಗಳನ್ನು ಬರೆಯಲು ವಿನಂತಿಸಿದರು. ರಾಹುಲ್ ಸಾಂಕೃತ್ಯನ್‌ ನಿರ್ದೇಶನದ ಬೆಂಗಾಳಿ ಸಾಮಾಜಿಕ ಹೋರಾಟಗಾರನ ಕಥಾ ಹಂದರವುಳ್ಳ ಬಿಗ್ ಬಜೆಟ್ ಸಿನಿಮಾ ಇದು. ಎಲ್ಲಾ ಭಾಷೆಗಳಲ್ಲೂ ಎಲ್ಲೂ ರಾಜಿಯಾಗದೆ ಸಮಾನ ಗುಣಮಟ್ಟ ಕಾಯ್ದುಕೊಳ್ಳಬೇಕೆಂಬ ಕಾಳಜಿಯಿಂದ ಎಲ್ಲಾ ಭಾಷೆಯ ಹಾಡುಗಳ ಜವಾಬ್ದಾರಿಯನ್ನು ಖುದ್ದು ತಾವೇ ವಹಿಸಿರುವುದಾಗಿ ತಿಳಿಸಿದಾಗ ಅವರ ಆಸಕ್ತಿ ಕಂಡು ಖುಷಿಯಾಯಿತು. ನಾನು ಕೇಳಿದ ಸಂಭಾವನೆಯು ಅವರಿಗೆ ಒಪ್ಪಿದರು. ಡಬ್ಬಿಂಗ್ ಸಿನಿಮಾ ಎಂಬ ಕಾರಣಕ್ಕೆ ನಾನು ಹಾಡುಗಳ ಅನುವಾದ ಮಾಡುವುದಿಲ್ಲ, ನನ್ನದೇ ಸ್ವಂತ ಸಾಹಿತ್ಯ ಬರೆಯುತ್ತೇನೆ ಎಂದಾಗ ಅದನ್ನು ಖುಷಿಯಿಂದ ಅನುಮೋದಿಸಿ ಪ್ರತಿ ಹಾಡಿಗೂ ಖುದ್ದು ಸಿನಿಮಾದ ನಿರ್ದೇಶಕರ ಬಳಿ ಮಾತಾಡಿಸಿ ಸನ್ನಿವೇಶ ಮತ್ತು ನಿರೀಕ್ಷೆಗಳನ್ನು ಅವರಿಂದಲೇ ವಿವರಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಒಟ್ಟಾರೆ ಮಿಕ್ಕಿ ಅವರ ಕಾಳಜಿ ಮತ್ತು ಶ್ರಮದಿಂದ ಐದು ಸುಂದರ ಹಾಡುಗಳ ಗುಚ್ಛ ಸಿದ್ಧವಾಗಿದೆ” ಎನ್ನುತ್ತಾರೆ ಕವಿರಾಜ್‌. ಡಬ್ಬಿಂಗ್ ಸಿನಿಮಾಗಳು ಹೆಚ್ಚು ವೃತ್ತಿಪರತೆಯಿಂದ ತಯಾರಾದಾಗ ಒಂದು ಘನತೆ ಇರುತ್ತದೆ ಎನ್ನುವ ಕವಿರಾಜ್‌ ಹಾಗಾಗಲಿ ಎಂದು ಆಶಿಸುತ್ತಾರೆ.

LEAVE A REPLY

Connect with

Please enter your comment!
Please enter your name here