ಮಣಿರತ್ನಂ ನಿರ್ದೇಶನದಲ್ಲಿ ಕಮಲ ಹಾಸನ್‌ ನಟಿಸುವುದು ಖಾತ್ರಿಯಾಗಿದೆ. ಇದು ಇವರಿಬ್ಬರ 36 ವರ್ಷಗಳ ನಂತರದ ಪ್ರಾಜೆಕ್ಟ್‌! ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ದುಲ್ಕರ್‌ ಸಲ್ಮಾನ್‌, ಜಯಂ ರವಿ, ತ್ರಿಷಾ ಕೃಷ್ಣನ್‌ ನಟಿಸಲಿದ್ದಾರೆ.

ಸಿನಿಮಾ ದಿಗ್ಗಜರಾದ ಕಮಲ ಹಾಸನ್ ಹಾಗೂ ಮಣಿರತ್ನಂ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ಇವರಿಬ್ಬರ ಸಿನಿಮಾದಲ್ಲಿ ಇತರೆ ಕೆಲವು ತಾರಾ ನಟರು ಇರಲಿದ್ದು, ಆ ನಟರು ಯಾರೆಂಬ ಸುಳಿವು ಸಿಕ್ಕಿದೆ. ಕಮಲ್‌ ಮತ್ತು ಮಣಿರತ್ನಂ ‘ನಾಯಗನ್’ ಸಿನಿಮಾ ಮೂಲಕ ಇಡೀ ಭಾರತ ಚಿತ್ರರಂಗವೇ ದಕ್ಷಿಣ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರು. ಕಮಲ ಹಾಸನ್ ಅವರ 234ನೇ ಸಿನಿಮಾವನ್ನು ಅವರ ಹಳೆಯ ಗೆಳೆಯ, ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಲಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ಇನ್ನೂ ಹಲವು ಖ್ಯಾತ​ ನಟ, ನಟಿಯರು ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದಲ್ಲಿ ರಂಜಿತ್ ಅಂಬಾಡಿ ಪ್ರಸಾಧನ ಕಲಾವಿದರಾಗಿ ಕೆಲಸ ಮಾಡಲಿದ್ದಾರೆ. ಸಿನಿಮಾದ ಅನೌನ್ಸ್​ಮೆಂಟ್ ಪ್ರೋಮೋ ಅನ್ನು Instagramನಲ್ಲಿ ಹಂಚಿಕೊಂಡಿರುವ ರಂಜಿತ್ ಅಂಬಾಡಿ, ಆ ಪೋಸ್ಟ್​ ಅನ್ನು ನಟರಾದ ದುಲ್ಕರ್ ಸಲ್ಮಾನ್, ಜಯಂ ರವಿ ಹಾಗೂ ನಟಿ ತ್ರಿಷಾ ಕೃಷ್ಣನ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಕಮಲ್ ಹಾಸನ್, ಮಣಿರತ್ನಂ ಹಾಗೂ ಎ ಆರ್ ರೆಹಮಾನ್ ಅವರಿಗೂ ಟ್ಯಾಗ್ ಮಾಡಿದ್ದಾರೆ. ಈ ಮೂಲಕ ದುಲ್ಕರ್, ಜಯಂ ರವಿ ಹಾಗೂ ತ್ರಿಷಾ ಸಹ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂಬುದನ್ನು ಖಾತ್ರಿಪಡಿಸಿದ್ದಾರೆ. ಈ ಮೂಲಕ ದುಲ್ಕರ್ ಸಲ್ಮಾನ್, ಜಯಂ ರವಿ ಹಾಗೂ ತ್ರಿಷಾ ಕೃಷ್ಣನ್ ಅವರು ಎರಡನೇ ಬಾರಿಗೆ ಮಣಿರತ್ನಂ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಜಯಂ ರವಿ ಹಾಗೂ ತ್ರಿಷಾ ಕೃಷ್ಣನ್ ನಟಿಸಿದ್ದರು. ಮಣಿರತ್ನಂ ನಿರ್ದೇಶಿಸಿದ್ದ ಪ್ರೇಮಕತೆ ‘ಓಕೆ ಕಣ್ಮಣಿ’ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ನಟಿಸಿದ್ದರು. ಈಗ ಈ ಮೂವರು ಮತ್ತೊಮ್ಮೆ ಮಣಿರತ್ನಂ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನು ಕಮಲ ಹಾಸನ್ ಹಾಗೂ ಮಣಿರತ್ನಂ ಜೋಡಿ ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದೆ. 1987ರಲ್ಲಿ ಬಿಡುಗಡೆ ಆಗಿದ್ದ ‘ನಾಯಗನ್’ ಸಿನಿಮಾವನ್ನು ಮಣಿರತ್ನಂ ನಿರ್ದೇಶಿಸಿ, ಕಮಲ್ ಹಾಸನ್ ನಟಿಸಿದ್ದರು. ಆ ಸಿನಿಮಾವನ್ನು ಭಾರತದ ‘ಗಾಡ್ ಫಾದರ್’ ಸಿನಿಮಾ ಎಂದು ಸಹ ಕರೆಯುತ್ತಾರೆ. ಹಲವು ಮಾಫಿಯಾ ಸಿನಿಮಾಗಳಿಗೆ ಈ ಚಿತ್ರ ಸ್ಫೂರ್ತಿಯಾಗಿತ್ತು. ಈಗ ಮತ್ತೆ ಈ ಜೋಡಿ ಒಂದಾಗುತ್ತಿದ್ದು, ಸಿನಿ ಪ್ರೇಮಿಗಳು ಕಾತರದಿಂದ ಇವರ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

https://www.instagram.com/reel/CxGsO8VyQ2x/?utm_source=ig_web_copy_link

LEAVE A REPLY

Connect with

Please enter your comment!
Please enter your name here