ತೀವ್ರ ಎದೆ ನೋವು ಕಾಣಿಸಿಕೊಂಡ ಕಾರಣ ನಟ ಸಯಾಜಿ ಶಿಂಧೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತನಾಳದಲ್ಲಿ ಬ್ಲಾಕೇಜ್‌ ಇದ್ದ ಕಾರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ತಾವು ಕ್ಷೇಮವಾಗಿರುವುದಾಗಿ ನಟ ಆಸ್ಪತ್ರೆಯಿಂದಲೇ ವೀಡಿಯೋ ಮಾಡಿ ಅಭಿಮಾನಿಗಳಿಗೆ ಪ್ರಾರ್ಥನೆಗೆ ಧನ್ಯವಾದ ಹೇಳಿದ್ದಾರೆ.

ಬಹುಭಾಷಾ ನಟ ಸಯಾಜಿ ಶಿಂಧೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಏಪ್ರಿಲ್‌ 11ರಂದು ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಕುಟುಂಬದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅವರಿಗೆ ಹೃದಯಕ್ಕೆ ಸಂಬಂಧಿಸಿದ ವಿವಿಧ ಪರೀಕ್ಷೆಗಳನ್ನು ಮಾಡಿಸಲಾಗಿದೆ. ನಂತರ ಹೃದಯದ ರಕ್ತನಾಳದಲ್ಲಿ ಬ್ಲಾಕೇಜ್‌ ಇರುವುದು ಗೊತ್ತಾಗಿದೆ. ಬ್ಲಾಕೇಜ್‌ ಕೊಂಚ ಹೆಚ್ಚಾಗಿಯೇ ಇದ್ದ ಕಾರಣಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದಾರಂತೆ.

ಸಯಾಜಿ ಶಿಂಧೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಆತಂಕದಲ್ಲಿದ್ದರು. ಈ ವಿಷಯ ತಿಳಿದ ನಟ ಸಯಾಜಿ ಅವರೇ ಆಸ್ಪತ್ರೆಯಿಂದಲೇ ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ನಮಸ್ಕಾರ ನಾನು ಆರೋಗ್ಯವಾಗಿದ್ದೇನೆ. ನನ್ನ ಹೃದಯದ ರಕ್ತನಾಳದಲ್ಲಿ ಬ್ಲಾಕೇಜ್‌ ಇತ್ತು. ಅದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈಗ ನಾನು ಆರೋಗ್ಯವಾಗಿದ್ದೇನೆ. ಯಾರೂ ಚಿಂತಿಸಬೇಡಿ’ ಎಂದು ಮನವಿ ಮಾಡಿದ್ದಾರೆ. ನಟನ ವಿಡಿಯೋ ನೋಡಿದ ಅಭಿಮಾನಿಗಳು ಶೀಘ್ರ ಗುಣಮುಖರಾಗುವಂತೆ ಹಾರೈಸಿ ಕಮೆಂಟ್‌ ಮಾಡುತ್ತಿದ್ದಾರೆ.

ಸಯಾಜಿ ಶಿಂಧೆ ಅವರಿಗೀಗ 65 ವರ್ಷ. ಶಸ್ತ್ರಚಿಕಿತ್ಸೆ ನಂತರ ನಟನ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಕೆಲವು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಲಿದ್ದಾರಂತೆ. ಮರಾಠಿ ರಂಗಭೂಮಿಯಿಂದ ಸಿನಿರಂಗಕ್ಕೆ ಕಾಲಿಟ್ಟ ಸಯಾಜಿ ಶಿಂಧೆ, ಕನ್ನಡ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಪುನೀತ್‌ ರಾಜಕುಮಾರ್‌ ಅಭಿನಯದ ‘ವೀರ ಕನ್ನಡಿಗ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೆಚ್ಚಾಗಿ ಖಳ ಪಾತ್ರಗಳಲ್ಲೇ ರಂಜಿಸಿರುವ ನಟ ಪೋಷಕ ಪಾತ್ರಗಳಿಗೂ ಜೀವ ತುಂಬಿದ್ದಾರೆ.

LEAVE A REPLY

Connect with

Please enter your comment!
Please enter your name here