ಮಹೇಶ್‌ ಬಾಬು ನಟನೆಯ ಬಹುನಿರೀಕ್ಷಿತ ‘ಗುಂಟೂರು ಖಾರಂ’ ತೆಲುಗು ಸಿನಿಮಾದ ಅತಿಥಿ ಪಾತ್ರದಲ್ಲಿ ಬಾಲಿವುಡ್‌ ತಾರೆ ಶಾರುಖ್‌ ಖಾನ್‌ ನಟಿಸುವ ಸಾಧ್ಯತೆಗಳಿವೆ. ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಮಹೇಶ್‌ ಬಾಬು ನಟಿಸುತ್ತಿರುವ ‘ಗುಂಟೂರ್ ಖಾರಂ’ ತೆಲುಗು ಚಿತ್ರದ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. ಸದ್ಯ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಜನವರಿ 12, 2024 ಚಿತ್ರದ ಬಿಡುಗಡೆ ದಿನಾಂಕ ಎಂದು ಘೋಷಣೆಯೂ ಆಗಿದೆ. ಈಗ ಚಿತ್ರಕ್ಕೆ ಸಂಬಂಧಿಸಿದಂತೆ ಸುದ್ದಿಯೊಂದು ಹೊರಬಿದ್ದಿದೆ. ಬಾಲಿವುಡ್‌ ನಟ ಶಾರುಖ್‌ ಖಾನ್‌ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಚಿತ್ರದ ಅಂತಿಮ ಭಾಗದಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮೂಲಗಳ ಪ್ರಕಾರ ಚಿತ್ರದ ದ್ವಿತಿಯಾರ್ಧ ಶಾರುಖ್ ಖಾನ್ ಪಾತ್ರವನ್ನು ಆಧರಿಸಿದೆ. ಅವರ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳು ಮತ್ತು ಅದನ್ನು ಚಿತ್ರದ ಕಥಾಹಂದರದಲ್ಲಿ ಹೇಗೆ ಅಳವಡಿಸಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ಈ ಮಾಹಿತಿಯನ್ನು ಶಾರುಖ್ ಖಾನ್ ಅಥವಾ ಗುಂಟೂರು ಖಾರಂ ಚಿತ್ರತಂಡ ಇನ್ನೂ ಖಚಿತಪಡಿಸಬೇಕಿದೆ.

ಕನ್ನಡತಿ ಶ್ರೀಲೀಲಾ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಮೀನಾಕ್ಷಿ ಚೌಧರಿ, ಭೂಮಿ ಪಡ್ನೇಕರ್, ಬ್ರಹ್ಮಾನಂದಂ, ರಮ್ಯಾಕೃಷ್ಣನ್, ಜಗಪತಿಬಾಬು, ಪ್ರಕಾಶ್ ರಾಜ್, ಜಯರಾಮ್, ಮುಖೇಶ್ ರಿಷಿ, ಆಶಿಶ್‌ ವಿದ್ಯಾರ್ಥಿ, ರಘು ಬಾಬು, ಮಹೇಶ್ ಅಚಂತ, ಈಶ್ವರಿರಾವ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಲ್ ರಾಜು ಈ ಚಿತ್ರದ ವಿತರಣಾ ಹಕ್ಕುಗಳನ್ನು 45 ಕೋಟಿ ರೂಪಾಯಿಗೆ ಈಗಾಗಲೇ ಖರೀದಿಸಿದ್ದಾರೆಂದು ವರದಿಯಾಗಿದೆ. ಸುದ್ದಿಯಲ್ಲಿರುವ ಮೇಲಿನ ಹೊಸ ಬೆಳವಣಿಗೆಯಿಂದ ‘ಗುಂಟೂರು ಖಾರಂ’ನ ನಿರ್ಮಾಣ ಸಂಸ್ಥೆ Sitara Entertainments ದಿಲ್‌ ರಾಜು ಅವರು ವಿತರಣಾ ಹಕ್ಕುಗಳ ಕುರಿತು ಏನು ಮಾಡಬಹುದೆಂದು ಕಾದು ನೋಡಬೇಕಿದೆ.

LEAVE A REPLY

Connect with

Please enter your comment!
Please enter your name here